ಪ್ರಶಾಂತ ಚಂದ್ರ ಮಹಲನೋಬಿಸ್ (ಜೂನ್ ೨೯, ೧೮೯೩ - ಜೂನ್ ೨೮, ೧೯೭೨) ಭಾರತ ದೇಶ ಕಂಡ ಮಹಾನ್ ಸಂಖ್ಯಾಶಾಸ್ತ್ರಜ್ಞ, ಮಹಾನ್ ಯೋಜನಾ ತಜ್ಞ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಥಾಪಕರು. ಭಾರತ ವಿಶ್ವದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಗಳಿಸಿರುವ ಮಹತ್ತಿಗೆ ಮಹಲನೋಬಿಸ್ ಅವರು ಹಾಕಿಕೊಟ್ಟಿರುವ ಅಡಿಪಾಯ ಮಹತ್ವಪೂರ್ಣವಾದದ್ದು. == ಜೀವನ == ಪ್ರಶಾಂತ ಚಂದ್ರ ಮಹಲನೋಬಿಸ್ ಅವರು ಜನಿಸಿದ ದಿನ ಜೂನ್ ೨೯, ೧೮೯೩. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ತರಬೇತಿ ಪಡೆದು ಅಧ್ಯಾಪನ ನಡೆಸುತ್ತಿದ್ದ ಮಹಲನೋಬಿಸ್ ಅವರು ಅಚ್ಚರಿಯೋ ಎಂಬಂತೆ ಸಂಖ್ಯಾಶಾಸ್ತ್ರದ ಹಾದಿ ಹಿಡಿದು ದೇಶದ ಔನ್ನತ್ಯಕ್ಕಾಗಿ ಯೋಜನಾಕರ್ತರಾಗಿ ದುಡಿದರು. == ನವ ಭಾರತ ನಿರ್ಮಾತೃ == ಮಹಲನೋಬಿಸ್ ಅವರು ಕೇವಲ ಒಬ್ಬ ಸಂಖ್ಯಾಶಾಸ್ತ್ರಜ್ಞರು ಮಾತ್ರವಾಗಿರದೆ ಬ್ರಿಟಿಷ್ ಆಡಳಿತದಿಂದ ವಿಮುಕ್ತಿಗೊಂಡ ನವಭಾರತ ನಿರ್ಮಾಣಕ್ಕೆ ರೂಪುಕೊಟ್ಟ ಮಹತ್ವಪೂರ್ಣ ನಿರ್ಮಾತೃಗಳೂ ಆಗಿದ್ದಾರೆ. ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ದೇಶ ಕಂಡ ಮಹತ್ವದ ಬೆಳವಣಿಗೆಯಲ್ಲಿ ಮಹಲನೋಬಿಸ್ ಅವರ ಪಾತ್ರ ಹಿರಿದಾದುದು ಎಂಬುದು ತಜ್ಞರ ಅಭಿಪ್ರಾಯ. == ಮಹತ್ವದ ಮಾದರಿ ಸಮೀಕ್ಷೆಗಳು == ಮಹಲನೋಬಿಸ್ ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಮಾದರಿ ಸಮೀಕ್ಷೆಗಳನ್ನು ಕೈಗೊಂಡರು. ಸ್ಯಾಂಪ್ಲಿಂಗ್ ವಿಧಾನಗಳ ಉಪಯುಕ್ತತೆಯನ್ನು ಪರಿಚಯಿಸಿದರು. ೧೯೩೭ರಿಂದ ೧೯೪೪ರ ಮಧ್ಯದಲ್ಲಿ ಗ್ರಾಹಕರ ವೆಚ್ಚ, ಚಹಾಸೇವನೆ ಚಟ, ಸಾರ್ವಜನಿಕ ಅಭಿಪ್ರಾಯ, ಬೆಳೆ ಕ್ಷೇತ್ರ, ರೋಗಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಮೀಕ್ಷೆ ಕೈಗೊಂಡರು. ಬೆಳೆ ಇಳುವರಿ ಅಂದಾಜು ಪದ್ಧತಿ, ಬೆಳೆ ಕಟಾವು ಮಾಡುವುದು ಹೀಗೆ ಹಲವಾರು ವ್ಯವಸ್ಥೆಗಳ ಬಗೆಗೆ ಭಾರತೀಯರಿಗೆ ವೈಜ್ಞಾನಿಕವಾಗಿ ತಿಳಿವಳಿಕೆನೀಡಿದರು. ಅವರು ಕೇವಲ ಕಚೇರಿಯಲ್ಲಿ ಒಂದೆಡೆ ಕುರ್ಚಿಗೆ ಅಂಟಿಕೊಂಡಿರದೆ ವಿವಿಧ ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾಯೋಗಿಕವಾಗಿ ಕೆಲಸ ನಿರ್ವಹಿಸಿದರು. ಇಂದು ಕೂಡಾ ಮಹಲನೋಬಿಸ್ ಅವರು ಮಾರ್ಪಾಡು ಮಾಡಿದ, ಪರಿಚಯಿಸಿದ ನಾನಾ ಪದ್ಧತಿಗಳನ್ನು ಅನುಸರಿಸಿ ಜಿಲ್ಲೆ, ರಾಜ್ಯ ಹಾಗೂ ದೇಶಾದ್ಯಂತ ಬೆಳೆ ಇಳುವರಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸ್ವಾತಂತ್ರ್ಯಾನಂತರ ಪ್ರಾರಂಭಗೊಂಡ ಪಂಚವಾರ್ಷಿಕ ಯೋಜನೆಗಳ ನಿರೂಪಣೆಯಲ್ಲಿ ಮಹಲನೋಬಿಸ್ ಅವರ ಪಾತ್ರ ಹಿರಿದಾದುದು. == ವೈವಿಧ್ಯಪೂರ್ಣ ಪಾಂಡಿತ್ಯ == ಮಹಲನೋಬಿಸ್ ಅವರಿಗೆ ಭೌತಶಾಸ್ತ್ರ, ಜೀವಶಾಸ್ತ್ರ, ಸಂಖ್ಯಾಶಾಸ್ರ್ಸಗಳು ಮಾತ್ರವಲ್ಲದೆ ಮಾನವಜೀವನ ಮತ್ತು ಈ ಬದುಕಿನ ಮೂಲವನ್ನು ಅರಸುವ , ವೈಜ್ಞಾನಿಕವಾದ ವಾತಾವರಣ ಅಧ್ಯಯನ ಕ್ಷೇತ್ರವಾದ ಮುಂತಾದವುಗಳ ಬಗೆಗೆ ಕೂಡಾ ಅಪಾರವಾದ ಜ್ಞಾನ ಮತ್ತು ಆಸಕ್ತಿಗಳು ಇದ್ದವು. == ಪ್ರಶಸ್ತಿ ಗೌರವಗಳು == ೧೯೪೫ರ ವರ್ಷದಲ್ಲಿ ಮಹಲನೋಬಿಸ್ ಅವರಿಗೆ ಲಂಡನ್ನಿನ ರಾಯಲ್ ಸ್ಟಾಟಿಸ್ಟಿಕಲ್ ಸೊಸೈಟಿಯ ಗೌರವ ಸದಸ್ಯತ್ವ ಸಂದಿತ್ತು. ೧೯೫೭ರ ವರ್ಷದಲ್ಲಿ ಅವರಿಗೆ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟಿನ ಗೌರವ ಅಧ್ಯಕ್ಷ ಪದವಿ ಮತ್ತು ಭಾರತ ಸರ್ಕಾರದ ಪದ್ಮವಿಭೂಷಣ ಗೌರವಗಳು ಸಂದವು. ಮಹಲನೋಬಿಸ್ ಅವರು ಸುಮಾರು ಇಪ್ಪತ್ತು ಮಹತ್ವ ಪೂರ್ಣ ವೈಜ್ಞಾನಿಕ ಬರವಣಿಗೆಗಳನ್ನು, ವಿವಿಧ ವಿಷಯಗಳ ಕುರಿತಾದ ನೂರಾರು ಪ್ರಬಂಧಗಳನ್ನೂ ರಚಿಸಿದ್ದರು. == ವಿದಾಯ == ಈ ಮಹಾನ್ ವ್ಯಕ್ತಿ ಜೂನ್ ೨೮, ೧೯೭೨ರ ವರ್ಷದಲ್ಲಿ ಈ ಲೋಕವನ್ನಗಲಿದರು.